ಬೆಂಗಳೂರು, ಜೂನ್ 26: ಬೆಂಗಳೂರಿನ ಸೀಗೇಹಳ್ಳಿ ಪ್ರದೇಶದಲ್ಲಿ ನಡೆದ ಭೀಕರ ತ್ರಿವಳಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ ಕೆನೆತ್ (25)ನನ್ನು ಪುದುಚೇರಿ ಪೊಲೀಸರು ಮತ್ತು ಬೆಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಕೆನೆತ್ನ ಲಿವ್-ಇನ್ ಸಂಗಾತಿ ಶ್ವೇತಾ ಅವರನ್ನು ಬಂಧಿಸಲಾಗಿದ್ದು, ಇಬ್ಬರೂ ಕೊಲೆಯಲ್ಲಿ ಭಾಗಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜೂನ್ 23ರಂದು ಕೆಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೀಗೇಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಶ್ವೇತಾ ಅವರ ತಂದೆ ಸೋಮಸುಂದರ್, ತಾಯಿ ಮುತ್ತುಲಕ್ಷ್ಮಿ ಹಾಗೂ ತಂಗಿ ಸುಪ್ರಿಯಾ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಮುತ್ತುಲಕ್ಷ್ಮಿ ಮತ್ತು ಸುಪ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಸೋಮಸುಂದರ್ ಅಪಾರ್ಟ್ಮೆಂಟ್ನಿಂದ ಹೊರಗೆ ಓಡಿ ಬಂದು ನೆರೆಹೊರೆಯವರಿಗೆ ಮಾಹಿತಿ ನೀಡಿದ ಬಳಿಕ ಕುಸಿದು ಬಿದ್ದಿದ್ದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.ಪ್ರಕರಣ ಬೆಳಕಿಗೆ ಬಂದ ಬಳಿಕ ಶ್ವೇತಾ ಅವರನ್ನು ಜೂನ್ 24ರಂದು ಪುದುಚೇರಿಯಲ್ಲಿ ಬಂಧಿಸಲಾಯಿತು. ವಿಚಾರಣೆ ವೇಳೆ ಕುಟುಂಬ ಸದಸ್ಯರ ಹತ್ಯೆಗೆ ಕೆನೆತ್ ಜೊತೆಗೆ ಸಂಚು ರೂಪಿಸಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
. ನ್ಯಾಯಾಲಯವು ಶ್ವೇತಾರನ್ನು 15 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.ಶ್ವೇತಾ ನೀಡಿದ ಮಾಹಿತಿ ಹಾಗೂ ತನಿಖೆಯಲ್ಲಿ ಲಭ್ಯವಾದ ತಾಂತ್ರಿಕ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಕೆನೆತ್ನ ಚಲನವಲನವನ್ನು ಪತ್ತೆಹಚ್ಚಿ, ಪುದುಚೇರಿ ಬೀಚ್ ಸಮೀಪದಲ್ಲಿ ಜೂನ್ 25ರಂದು ಬಂಧಿಸಿದರು.ಪುದುಚೇರಿ ಪೊಲೀಸ್ ಸಹಾಯಕ ಉಪನಿರೀಕ್ಷಕ ರಾಮಲಿಂಗಂ ಅವರ ಪ್ರಕಾರ, ಕೆನೆತ್ ಮೊದಲು ನಗರದ ಬಾರ್ ಒಂದರಲ್ಲಿ ಕಾಣಿಸಿಕೊಂಡಿದ್ದ. ಬಳಿಕ ಬೆಂಗಳೂರು ಹಾಗೂ ಪುದುಚೇರಿ ಪೊಲೀಸರು ಜಂಟಿಯಾಗಿ ನಿಗಾವಹಿಸಿ ಸುಮಾರು 200 ಮೀಟರ್ ಬೆನ್ನಟ್ಟಿದ ನಂತರ ಆತನನ್ನು ವಶಕ್ಕೆ ಪಡೆದರು. ಬಂಧಿಸುವ ವೇಳೆ ಕೆನೆತ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರಿಂದ ರಾಮಲಿಂಗಂ ಸೇರಿದಂತೆ ಕೆಲ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ.ಹತ್ಯೆಯ ನಂತರ ಶ್ವೇತಾ ಮತ್ತು ಕೆನೆತ್ ಇಬ್ಬರೂ ಪ್ರತ್ಯೇಕ ಮಾರ್ಗಗಳಲ್ಲಿ ಬೆಂಗಳೂರಿನಿಂದ ಪರಾರಿಯಾಗಿದ್ದು, ಅಂತಿಮವಾಗಿ ಇಬ್ಬರೂ ಸ್ವತಂತ್ರವಾಗಿ ಪುದುಚೇರಿಗೆ ತಲುಪಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.ಆರಂಭಿಕ ವಿಚಾರಣೆಯಲ್ಲಿ ಶ್ವೇತಾ ತಾನು ಒಬ್ಬಳೇ ಕೃತ್ಯ ಎಸಗಿರುವುದಾಗಿ ಹೇಳಿದ್ದಳು.
ಆದರೆ ತಾಂತ್ರಿಕ ಹಾಗೂ ಇತರ ಸಾಕ್ಷ್ಯಗಳು ಕೆನೆತ್ನ ಪಾತ್ರವನ್ನು ಸೂಚಿಸಿದ್ದರಿಂದ ತನಿಖೆಯನ್ನು ವಿಸ್ತರಿಸಿ ಅಂತಿಮವಾಗಿ ಆತನನ್ನು ಬಂಧಿಸಲಾಗಿದೆ.ಈ ಹತ್ಯೆಗಳು ಪೂರ್ವನಿಯೋಜಿತವಾಗಿದ್ದವು ಎಂಬ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು, ಕೊಲೆಗೂ ಮುನ್ನ ನಡೆದ ಘಟನೆಗಳ ಸಂಪೂರ್ಣ ವಿವರವನ್ನು ಪರಿಶೀಲಿಸುತ್ತಿದ್ದಾರೆ. ಮೃತದೇಹಗಳನ್ನು ವಿಲೇವಾರಿ ಮಾಡುವ ಉದ್ದೇಶ ಆರೋಪಿಗಳಿಗಿತ್ತು ಎನ್ನಲಾಗಿದ್ದು, ಆದರೆ ಶ್ವೇತಾ ಅವರ ತಂದೆ ಮತ್ತು ತಂಗಿ ನಿರೀಕ್ಷೆಗೂ ಮುನ್ನ ಮನೆಗೆ ಬಂದಿದ್ದರಿಂದ ಅವರ ಯೋಜನೆ ಬದಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ
.ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
